ಶೈಲಜಾ ಮಧುಸೂದನ್, ನೃತ್ಯಪಟು ಮತ್ತು ಸಂಗೀತ ವಿದುಷಿ. ಇವರ ಕಾರ್ಯಕ್ಷೇತ್ರ ಮುಂಬಯಿ. == ಶೈಲಜಾರವರ ವ್ಯಕ್ತಿತ್ವ == ನಾಟ್ಯಕಲೆಗೆ ಬೇಕಾದ ಒಳ್ಳೆಯ ಆಕರ್ಷಕ ವ್ಯಕ್ತಿತ್ವ, ಶಾರೀರ ಮತ್ತು ಹಾಡುಗಾರಿಕೆಗೆ ಬೇಕಾದ ಮಧುರ ಸ್ವರ, ಹೊಂದಿರುವ ಶೈಲಜಾರವರು, ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ಥಾನಿ ಸಂಗೀತ ಪದ್ಧತಿಗಳಲ್ಲಿ ಸಿದ್ಧಿಪಡೆದಿದ್ದಾರೆ.ಅವರು ಆಲ್‌ ಇಂಡಿಯಾ ರೇಡಿಯೋ ಕಲಾವಿದರ ತಂಡದಲ್ಲಿ ತಮ್ಮ ಗಾಯನದಿಂದ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದಾರೆ. ಮುಂಬಯಿನ ಉಪನಗರವಾದ ಭಾಂಡೂಪ್‌ ಪರಿಸರದ ನೃತ್ಯ ವಿದ್ಯಾನಿಲಯದ ಮೂಲ ಸ್ಥಾಪಕ ನಿರ್ದೇಶಕಿಯಾಗಿ, ಎರಡೂವರೆ ದಶಕದಿಂದ ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇದು ಸಾಂಸ್ಕೃತಿಕ ಪರಂಪರೆಯೊಂದಕ್ಕೆ ನಾಂದಿ ಹಾಡುವುದರಲ್ಲಿ ಸಕ್ಷಮ ಪಾತ್ರ ವಹಿಸಿದೆ. ನೃತ್ಯವು ಭಗವಂತನಿಗೆ ಅತ್ಯಂತ ಪ್ರಿಯವಾದ ಪರಮ ಕಲೆ ಎಂದು ತಿಳಿದು ಬರುತ್ತದೆ. ಗಂಧ ಮಾಲ್ಯಾದಿ ಪೂಜೆಗಳಿಂದ ಪೂಜಿಸಿದರೆ ಆಗುವ ಸಂತೋಷಕ್ಕಿಂತಲೂ ನಾಟ್ಯ ಪ್ರಯೋಗವನ್ನು ಬಲ್ಲ ನಟರು ಅರ್ಪಿಸುವ ಮಂಗಳ ಸ್ತುತಿಗಳಿಂದ ದೇವತೆಗಳಿಗೆ ಅಧಿಕ ಸಂತೋಷವಾಗುತ್ತದೆ ಎಂಬ ಭರತ ವಾಕ್ಯದಿಂದ ಉದ್ಧರಿಸಿದ ತತ್ವದಿಂದ ಪ್ರಭಾವಿತರಾದ ಶೈಲಜಾದಂಪತಿಗಳು, ತಮ್ಮ ತಂದೆಯವರಿಂದ ಕೊಡುಗೆಯಾಗಿ ಬಂದ ನೃತ್ಯ ಮಹಾಕಲಾವಿದ್ಯೆಯನ್ನು ಪ್ರಸಾರಮಾಡುತ್ತಿದ್ದಾರೆ. == ಕರಾವಳಿ ಜಿಲ್ಲೆಗಳ ಹಿಂದಿನ ಸ್ಥಿತಿ == ಹಿಂದಿನಿಂದ ಕರ್ನಾಟಕ ಕರಾವಳಿ ಜಿಲ್ಲೆಯ ಜನರು ಹೋಟೆಲ್ ಉದ್ಯಮ, ಶಿಕ್ಷಣ, ಬ್ಯಾಂಕಿಂಗ್, ಯಕ್ಷಗಾನ, ಮತ್ತು ಕೃಷಿ ವಲಯಗಳಲ್ಲಿ ಮುಂಚೂಣಿಯಲ್ಲಿದ್ದರು. ಕರಾವಳಿಯಲ್ಲಿ ಭಾರತ ನಾಟ್ಯ ಹೊಸದು. ಅಂದಿನ ಕಾಲದ ಜನ ನೃತ್ಯ ಕಲೆಯ ಬಗ್ಗೆ, ಕುಲೀನ ಮನೆತನದವರು ಚರ್ಚಿಸಲೂ ಇಷ್ಟಪಡುತ್ತಿರಲಿಲ್ಲ. ಭರತನಾಟ್ಯ ಕಲಾವಿದರ ಸಾಧನೆಗಳೂ ಪ್ರತಿಷ್ಠೆಯ ಸಂಕೇತವಲ್ಲವೆಂಬ ಭಾವನೆ ಇತ್ತು. ಭರತನಾಟ್ಯ ವಲಯದಲ್ಲಿ ಮಹಿಳೆಯರೇ ಹೆಚ್ಚಾಗಿ ಭಾಗವಹಿಸುತ್ತಿದ್ದ ಸಮಯದಲ್ಲಿ ಇಬ್ಬರು ಶ್ರೇಷ್ಠ ಮಟ್ಟದ 'ಕೃಷ್ಣರಾವ್' ಎಂಬ ಒಂದೇ ಹೆಸರಿನ ನೃತ್ಯ ಪಟುಗಳು, ಏಕ ಸಮಯದಲ್ಲಿ ಮತ್ತು ಒಂದೇ ಊರಿನಿಂದ ಮತ್ತು ಗುರುಗಳ ಆಶೀರ್ವಾದದಿಂದ ನೃತ್ಯವನ್ನು ಕಲಿತು, ಭಾರತಿಯ ಪರಂಪರೆಯನ್ನು ದೇಶ ವಿದೇಶಗಳಲ್ಲಿ ಪ್ರಸ್ತುತಪಡಿಸಿ, ರಾಷ್ಟ್ರದ ಹೆಸರನ್ನು ಪ್ರಸಿದ್ಧಿಪಡಿಸಿದರು. ಒಬ್ಬ ಕಲಾವಿದ ಶ್ರೀಮತಿ ಶೈಲಜಾರವರ ತಂದೆ, ಯು.ಎಸ್.ಕೃಷ್ಣರಾವ್, ಉಡುಪಿಯ ಬಳಿಯ 'ಉಚ್ಚಿಲ'ದಲ್ಲಿ ಜನಿಸಿದರು.ಮತ್ತೊಬ್ಬ ಯು.ಎಸ್. ಕೃಷ್ಣರಾವ್ ಉತ್ತರ ಕನ್ನಡದ 'ಮಲ್ಲಾಪುರ' ದಲ್ಲಿ ಜನಿಸಿದರು. ಇಂಥ ಸಮಯದಲ್ಲಿ ನೃತ್ಯರಂಗಕ್ಕೆ ಪ್ರವೇಶ ಮಾಡಿದ ಸಂಪ್ರದಾಯಸ್ಥ ಮನೆತನದ ಯು.ಎಸ್‌.ಕೃಷ್ಣರಾವ್‌ ೧೯೪೦ ರಲ್ಲೇ ಮಂಗಳೂರಿನಲ್ಲಿ, "ಕದ್ರಿ ನೃತ್ಯ ವಿದ್ಯಾಲಯ" ಸ್ಥಾಪಿಸಿದ್ದರು. ಕದ್ರಿ, ಶ್ರೀ ಮಂಜುನಾಥ ಸ್ವಾಮಿಯ ಪಾವನವಾದ ಕ್ಷೇತ್ರವೆಂದು ಹೆಸರಾಗಿದೆ. ಕೃಷ್ಣರಾಯರು, ಕದ್ರಿ ಶಾಲೆಯಲ್ಲಿ ಅಧ್ಯಾಪಕರಾಗಿ 'ರಾಜಾ ಮಾಸ್ಟರ್ ಎಂದು' ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮಂಜುನಾಥಸ್ವಾಮಿಯ ಅನುಗ್ರಹದಿಂದ ನಾಟ್ಯಾಚಾರ್ಯರಿಗೆ ನೃತ್ಯ ರಂಗದಲ್ಲಿ ಕದ್ರಿಯ ಹೆಸರನ್ನು ಉಳಿಯುವಂತೆ ಮಾಡಿದ ಸಾಧಕರೆಂದು ಗುರುತಿಸಲ್ಪಡುತ್ತಾರೆ. == ಗುರು,ಕೃಷ್ಣರಾಯರ ಸೂಕ್ಷ್ಮ ಪರಿಚಯ == ಶೈಲಜಾರವರ ತಂದೆ ಯು.ಎಸ್. ಕೃಷ್ಣರಾಯರ ಹುಟ್ಟೂರು ಮೂಲತಃ ಉಡುಪಿ ಸಮೀಪ ಉಚ್ಚಿಲ. (೫-೧೧-೧೯೧೪-೧೦-೧-೨೦೦೭) ಕೃಷ್ಣರಾಯರ ತಂದೆ ಸುಬ್ಬರಾಯರು. ಆಗಿನ ಬ್ರಿಟಿಷ್ ಸರಕಾರದಲ್ಲಿ ಶಿರಸ್ತೇದಾರರಾಗಿ ಕೆಲಸ ಮಾಡುತ್ತಿದ್ದರು. ಯುವ ಕೃಷ್ಣರಾಯರು, ೧೯೩೪ ರಲ್ಲಿ 'ಕದ್ರಿಯ ವಿದ್ಯಾ ಬೋಧಿನಿ ಶಾಲೆ'ಯಲ್ಲಿ ಅಧ್ಯಾಪಕ ವೃತ್ತಿಗೆ ಸೇರಿದ ಬಳಿಕ. ಕದ್ರಿಯಲ್ಲಿ ನೃತ್ಯಾಭ್ಯಾಸ ಶುರುವಾಯಿತು. ೧೯೪೩ ರಲ್ಲಿ ಕೃಷ್ಣರಾಯರು ೧೪ ವರ್ಷ ಪ್ರಾಯದ ಜಯಲಕ್ಷ್ಮಿ ಅವರನ್ನು ವಿವಾಹವಾದರು. ಈ ದಂಪತಿಗಳಿಗೆ ೫ ಜನ ಮಕ್ಕಳು ಅರುಣ್‌, ನಿರ್ಮಲಾ, ಪ್ರವೀಣ್‌ ಶೈಲಜಾ, ಸಂಧ್ಯಾ ತಾಯಿಯವರು, ಅತಿ-ಸರಳ, ಹಾಗೂ ಸಾತ್ವಿಕ ಸ್ವಭಾವದವರು. ಕಷ್ಟಸಹಿಷ್ಣು, ಮತ್ತು ಯಾವಾಗಲೂ ಹಸನ್ಮುಖಿಯಾಗಿರುತ್ತಿದ್ದರು. ತಮ್ಮ ಮನೆಗೆ ನೃತ್ಯ ಕಲಿಯಲು ಬರುವ ಮಕ್ಕಳಿಗೆ, ಮನೆಗೆ ಭೇಟಿ ನೀಡುವ ತಂದೆಯವರ ಅಪ್ತ ಮಿತ್ರರು, ಬಂಧುಗಳ ಜೊತೆ ಅತ್ಯಂತ ಆತ್ಮೀಯವಾಗಿ ನಡೆದು ಕೊಳ್ಳುತ್ತಿದ್ದರು. ತಂದೆಯವರ ನೃತ್ಯ ಚಟುವಟಿಕೆಗಳು ಸ್ವಲ್ಪವೂ ಹಿಂದೆ ಬೀಳದಂತೆ ನಿಗಾವಹಿಸಿ ಅವಕ್ಕೆ ತಕ್ಕ ಪೂರಕ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಮಡದಿಯ ಬೆಂಬಲ ಕೃಷ್ಣರಾಯರ ನಾಟ್ಯರಂಗದ ಕೃಷಿಗೆ ಅತ್ಯವಕಶ್ಯಕ ಹಾಗೂ ಬಹಳ ಮಹತ್ವದ್ದಾಗಿತ್ತು. ತಮ್ಮ ಮಕ್ಕಳಿಗೆಲ್ಲಾ ತಾವೇ ಖುದ್ದಾಗಿ ನಿಗವಹಿಸಿ ನಾಟ್ಯಕಲೆಗಳಲ್ಲಿ ಮತ್ತು ಸಂಗೀತದಲ್ಲಿ ನಿಷ್ಣಾತರನ್ನಾಗಿ ಮಾಡಿದರು. ಕೃಷ್ಣರಾವ್ ದಂಪತಿಗಳ ಮಕ್ಕಳೆಲ್ಲಾ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಭರತನಾಟ್ಯ ಕಲಾವಿದರಾಗಿ ಮತ್ತು ನಾಟ್ಯ ಶಿಕ್ಷಕರಾಗಿ ಕಲಾ ಸೇವೆ ಮಾಡುತ್ತಿದ್ದಾರೆ. ಮಕ್ಕಳೆಲ್ಲಾ ತಂದೆಯವರು ಅಸ್ತೆಯಿಂದ ಆರಂಭಿಸಿದ ಸಾಂಪ್ರದಾಯಿಕ ಹಾಗು ಪುರಾತನ ಸಂಗೀತ ನೃತ್ಯ ಕಲೆಗಳನ್ನೂ ಸಮರ್ಪಕವಾಗಿ ಮುಂದುವರೆಸಿಕೊಂಡು ಹೊಗುತ್ತಿದ್ದಾರೆ. == ಶೈಲಜಾರವರ ವಿದ್ಯಾಭ್ಯಾಸ == ಮಂಗಳೂರಿನ ಸೈಂಟ್‌ ಆಗ್ನೇಸ್‌ ಕಾಲೇಜಿನಲ್ಲಿ ಪ್ರಾಥಮಿಕ ಶಾಲೆಯಿಂದ ಬಿ.ಎ. ಪದವಿ ತನಕ ಶಿಕ್ಷಣ ಪೂರೈಸಿದ್ದರು. ತಂದೆಯವರು ಅತ್ಯಂತ ಪ್ರೀತಿಯಿಂದ ಹೇಳಿಕೊಟ್ಟು ತರಭೇತಿಗೊಳಿಸಿದ ಭರತ ನಾಟ್ಯ ಶೈಲಜರವರ ಆತ್ಮಸ್ಥೈರ್ಯವನ್ನು ನೂರುಪಟ್ಟು ಹೆಚ್ಚಿಸಿತು. ಹಿಂದೂಸ್ಥಾನಿ ಸಂಗೀತವನ್ನು ಗುರು. ಶ್ರೀ ನಾರಾಯಣ ಪೈ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು, ಗುರು. ,ಶ್ರೀ ಗೋಪಾಲ ಕೃಷ್ಣ ಐಯ್ಯರ್‌,ಅವರಿಂದ ಕಲಿತರು. ತಂದೆಯಿಂದ ಪ್ರಾರಂಭದಲ್ಲಿ ಭರತನಾಟ್ಯ ಶಿಕ್ಷಣ ಪಡೆದ ನಂತರ, ಅಭಿನಯ ಶಿರೋಮಣಿ ಪಂದನಲ್ಲೂರು ಪರಂಪರೆಯ ದಿವಂಗತ. ರಾಜರತ್ನಂ ಪಿಳ್ಳೆಯವರು, ಹೆಚ್ಚಿನ ಶಿಕ್ಷಣ ನೀಡಿದರು. ಭರತನಾಟ್ಯ ಕ್ಷೇತ್ರದಲ್ಲಿ ಪರಿಣತಿ ಹೊಂದಲು ಸಹೋದರಿ ಶ್ರೀಮತಿ ಸಂಧ್ಯಾ ಕೇಶವ ರಾವ್‌ ರವರ ಯೋಗದಾನ ಬಹಳ ಮಹತ್ವದ್ದಾಗಿತ್ತು. == ವಿವಾಹ == ೧೯೮೨ ರಲ್ಲಿ ಉಡುಪಿ ಜಿಲ್ಲೆಯ ಎಲ್ಲೂರಿನ ನಿವಾಸಿಯಾದ 'ವೈ.ವಿ. ಮಧುಸೂದನ್‌ ರಾವ್‌' ಅವರ ಜೊತೆ ವಿವಾಹವಾಯಿತು. ಮಧುಸೂಧನ್ ೧೯೭೧ ರಲ್ಲೇ ಮುಂಬಯಿಗೆ ಬಂದು ನೌಕರಿಯಲ್ಲಿದ್ದರು. ನಾಟಕ, ಯಕ್ಷಗಾನ, ಅವರಿಗೆ ಬಹಳ ಪ್ರಿಯವಾಗಿತ್ತು. ಅದರಲ್ಲಿ ಅನ್ವೇಷಣೆಯ ಬಗ್ಗೆ ಅವರು ಸದಾ ಯೋಚಿಸುತ್ತಿದ್ದರು. ಮುಂಬಯಿನ ಹಿರಿಯ ಸಾಹಿತಿ ಮತ್ತು ಕಲಾವಂತರಾಗಿದ್ದ ಶ್ರೀಪತಿ ಬಲ್ಲಾಳ್‌, ಕೆ.ಜೆ.ರಾವ್‌ ಮುಂತಾದವರ ಜೊತೆ, ನಿಕಟ ಸಂಪರ್ಕ ಹೊಂದಿದ್ದರು. ನಾಟಕ, ಯಕ್ಷಗಾನಗಳಲ್ಲಿ ನಿರ್ದೇಶನ ಚಾತುರ್ಯದಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದರು. ಮಕ್ಕಳಿಗೆ ಯಕ್ಷಗಾನ ತರಭೇತಿ ನೀಡುತ್ತಿದ್ದರು. ಭರತನಾಟ್ಯ, ಸಂಗೀತ ಕಲಾಸೇವೆಗೆ ಮಧುಸೂದನ ಮತ್ತು ಶೈಲಜಾರವರ ಮಗ, 'ಪವನ್‌', ತಾಯಿಯವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿತು 'ಅರಂಗ್ರೇಟ್ರಂ' ಮಾಡಿದ್ದು ಅದೇ ಹಾದಿಯಲ್ಲಿ ಯಶಸ್ಸನ್ನು ಗಳಿಸಿ ಮುಂದುವರೆಯುತ್ತಿದ್ದಾನೆ. ಮಗಳು, 'ರಕ್ಷಾರಾವ್‌' ಗೂ ಭರತನಾಟ್ಯ,, ಯಕ್ಷಗಾನದಲ್ಲಿ ಅಪಾರ ಪರಿಶ್ರಮವಿದೆ. == ಮುಂಬಯಿನಲ್ಲಿ == ವಿವಾಹದ ಬಳಿಕ, ಪತಿಯ ಜತೆ ಮುಂಬಯಿಗೆ ಬಂದ ಶೈಲಜಾ ತಮ್ಮ ಪತಿಯ ಸಹಾಯ ಮತ್ತು ಮಾರ್ಗದರ್ಶನದಲ್ಲಿ ೧೯೮೬ ರಲ್ಲಿ ಭಾಂಡೂಪ್‌ನಲ್ಲಿ ನೃತ್ಯ ವಿದ್ಯಾನಿಲಯ ಸ್ಥಾಪಿಸಿದರು. ಮಂಗಳೂರಿನಲ್ಲಿ ತಂದೆ ಕೃಷ್ಣರಾವ್‌ ಸ್ಥಾಪಿಸಿದ ನೃತ್ಯ ಶಿಕ್ಷಣ ಸಂಸ್ಥೆಯ ಹೆಸರನ್ನೇ ಆಯ್ದುಕೊಂಡರು. ಅನಂತರ ಭರತನಾಟ್ಯ, ಯಾವುದೇ ಮೀಡಿಯ ಪ್ರಚಾರದ ಅಪೇಕ್ಷೆ, ಪ್ರಚಾರ ತಂತ್ರಗಳಿಗೆ ಮಹತ್ವ ಕೊಡದೆ ಕೇವಲ ಪರಿಶ್ರಮ ಮತ್ತು ಸಾಧನೆಯ ಮೇಲೆ ನಂಬಿಕೆಯಿಟ್ಟುಕೊಂಡು ನಡೆಸಿಕೊಂಡು ಬರುತ್ತಿರುವ ಶಾಲೆಯಲ್ಲಿ ಪ್ರಾರಂಭದ ವರ್ಷಗಳಿಂದಲೂ ಪ್ರತಿವರ್ಷ ಕನಿಷ್ಠ ಇಬ್ಬರು ವಿದ್ಯಾರ್ಥಿನಿ ಯರು ರಂಗಪ್ರವೇಶಕ್ಕೆ ತಯಾರಾಗುತ್ತಿದ್ದರು. == ರಜತ ಮಹೋತ್ಸವ == ೨೦೧೧ ರ ಮಾರ್ಚ್ ೧೩ ರಂದು ಮುಲುಂಡ್‌ ಪಶ್ಚಿಮದ 'ಕಾಳಿದಾಸ ಸಭಾಗೃಹ'ದಲ್ಲಿ ನೃತ್ಯ ವಿದ್ಯಾನಿಲಯದ 'ರಜತ ಮಹೋತ್ಸವ ಉದ್ಘಾಟನಾ ಸಮಾರಂಭ' ನಡೆದಿತ್ತು. ಈ ನೃತ್ಯಾಲಯದಿಂದ ಅಲ್ಲಿಯ ತನಕ, ಒಂದು ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ಭರತನಾಟ್ಯ ಶಿಕ್ಷಣ ಕೊಡಲಾಗಿತ್ತು. ಈ ನೃತ್ಯಪಟುಗಳು ತಾವು ನೆಲೆಸಿದ ಊರುಗಳಲ್ಲಿ ತಮ್ಮದೇ ಆದ ನಾಟ್ಯ ಶಾಲೆಗಳನ್ನು ನಡೆಸುತ್ತಿದ್ದಾರೆ. ಅವರ ವಿದ್ಯಾರ್ಥಿಗಳೂ ಸಹಾ ದೇಶ-ವಿದೇಶಗಳಲ್ಲಿ ಭರತನಾಟ್ಯ ರಂಗದಲ್ಲಿ ಹೆಸರುಗಳಿಸಿದ್ದಾರೆ. ೨೦೦ ಕ್ಕೂ ಮಿಗಿಲಾದ ವಿದ್ಯಾರ್ಥಿನಿಯರು ಭರತನಾಟ್ಯದಲ್ಲಿ ತರಬೇತಿ ಪಡೆಯುತ್ತಿದ್ದಾರೆ. == ೩೦ನೇ ವಾರ್ಷಿಕೋತ್ಸವ == ಮೈಸೂರ್ ಅಸೋಸಿಯೇಷನ್, ಮುಂಬಯಿ ನ ಕಿರುಸಭಾಗೃಹದಲ್ಲಿ 'ನೃತ್ಯವಿದ್ಯಾಲಯ,ಭಾಂಡೂಪ್ ನ ೩೦ ನೇ ವಾರ್ಷಿಕೋತ್ಸವ ಫೆಬ್ರವರಿ,೧೯,ರವಿವಾರ, ೨೦೧೭ ರಂದು ಜರುಗಿತು. == ಸುಗಮ ಸಂಗೀತ, ಲೋಕನೃತ್ಯಗಳಿಗೂ ಆದ್ಯತೆ == ಶೈಲಜಾ ಮಧುಸೂದನ್ ಭರತನಾಟ್ಯಂ, ಕೂಚುಪುಡಿ, ಮೋಹಿನಿ ಅಟ್ಟಂ ನೃತ್ಯಗಳಲ್ಲದೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಭಜನೆ ಹಾಡುಗಳನ್ನೂ ಭಾರತೀಯ ಜಾನಪದ ಶೈಲಿಯಲ್ಲಿ ನೃತ್ಯಗಳನ್ನು ನೃತ್ಯ ವಿದ್ಯಾನಿಲಯದಲ್ಲಿ ಕಲಿಸಿಕೊಡಲು ಹೆಚ್ಚು ಒತ್ತು ನೀಡುತ್ತಿದ್ದಾರೆ . ಅವರ ಸಾರಥ್ಯ ದಲ್ಲಿ ಇದುವರೆಗೆ ೩೦ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭರತನಾಟ್ಯ ರಂಗಪ್ರವೇಶ (ಅರಂಗ್ರೇಟಂ) ಮಾಡಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ನೃತ್ಯರೂಪಕಗಳೂ ಪ್ರಸ್ತುತಗೊಂಡಿವೆ. ಗಣೇಶ ವಿಜಯ, ಭಸ್ಮಾಸುರ ಮೋಹಿನಿ, ಭಕ್ತ ಮಾರ್ಕಾಂಡೇಯ, ಸತಿ ದಾಕ್ಷಾಯಿನಿ, ಷಣ್ಮುಖ ವಿಜಯ, ದಾಸರು ಕಂಡ ಕೃಷ್ಣ, ಜಗನ್ಮೋಹನನೆ ಕೃಷ್ಣ, ಲಂಕಾ ದಹನ, ಸಮುದ್ರ ಮಥನ, ಬ್ರಹ್ಮ ಕಪಾಲ ಹೀಗೆ ೧೦ ಕ್ಕೂ ಮಿಕ್ಕಿದ ನೃತ್ಯರೂಪಕಗಳು ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿವೆ. ಬೆಂಗಳೂರು, ಮಂಗಳೂರು, ದಿಲ್ಲಿ, ಕತಾರ್‌ ಮೊದಲಾದ ನೂರಾರು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಾ ಬಂದಿದ್ದಾರೆ. == ಪ್ರಶಸ್ತಿ, ಗೌರವಗಳು == ಕನ್ನಡದ ಸುಪ್ರಸಿದ್ಧ ಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಜಿ.ಎಸ್‌.ಶಿವರುದ್ರಪ್ಪ ಮೊದಲಾದವರ ಭಾವಗೀತೆಗಳ ಗಾಯನ ಕಾರ್ಯಕ್ರಮಗಳನ್ನು ರಾಷ್ಟ್ರದಾದ್ಯಂತ ನೀಡಿ ಪ್ರೇಕ್ಷಕರ ಮನ್ನಣೆಯನ್ನುಗಳಿಸಿದ್ದಾರೆ. ಪುರಂದರದಾಸ, ಕನಕದಾಸರು ಮೊದಲಾದ ದಾಸ ಶ್ರೇಷ್ಠರ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸುಪ್ರಸಿದ್ದ ಸುಗಮ ಸಂಗೀತದ ವಿಖ್ಯಾತ ಗಾಯಕರಾದ ಸಿ.ಎಸ್‌. ಅಶ್ವತ್‌, ಮೈಸೂರು ಅನಂತಸ್ವಾಮಿ, ಎಚ್‌.ಕೆ. ನಾರಾಯಣ್‌, ಕೆ.ಜೆ.ಯೇಸುದಾಸ್‌ ಮುಂತಾದವರ ನಿರ್ದೇಶನದಲ್ಲಿ ಹಾಡುಗಳನ್ನುಪ್ರಸ್ತುತಪಡಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಕಾರ್ಯಕ್ರಮದಲ್ಲಿ ವೈವಿಧ್ಯತೆಯನ್ನು ತರಲು ಕನ್ನಡ ಚಿತ್ರಗೀತಗಳನ್ನೂ ಹಾಡಿದ್ದಾರೆ. ಈಗಾಗಲೇ 'ಗಾನಸುಧೆ'ಯ ಎರಡು ಧ್ವನಿ ಸುರುಳಿಗಳು ಬಿಡುಗಡೆಗೊಂಡಿವೆ. ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾದ ಸಾಹಿತ್ಯ, ಸಂಗೀತ, ನೃತ್ಯ, ಕಲೆ, ವಾಸ್ತುಶಿಲ್ಪಗಳು ನಮ್ಮ ಸಂಸ್ಕೃತಿಯನ್ನು ಪುರಾತನ ಕಾಲದಿಂದಲೂ ನಮ್ಮ ಜೀವನವನ್ನು ಶ್ರೀಮಂತಗೊಳಿಸಿವೆ. ಸಂಗೀತ ನೃತ್ಯಗಳಂತೂ ಅವುಗಳ ಗುಣಮಟ್ಟ, ಹಾಗೂ ಅರ್ಥವಂತಿಕೆಯಿಂದ ಪಾವಿತ್ರತೆಯ ಸಂಕೇತಗಳಾಗಿ ದೇವಸ್ಥಾನಗಳಲ್ಲಿ ಆರಾಧನಾ ವಿಧಿ-ವಿಧಾನಗಳ ಒಂದು ಅಂಗವಾಗಿ ಪ್ರಚಲಿತದಲ್ಲಿವೆ ಹಾಗಾಗಿ ನೃತ್ಯ ವಿದ್ಯಾಲಯಗಳು, ಸಂಗೀತ ವಿದ್ಯಾಲಯಗಳು ಪಾವಿತ್ರತೆಯ, ಗೌರವದ ಪ್ರತೀಕಗಳೆಂದು ಇಂದಿಗೂ ಜನ ನಂಬುತ್ತಾರೆ. ಭರತನಾಟ್ಯ -ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ವಿವಿಧ ಸಂಘ-ಸಂಸ್ಥೆಗಳು ಸಮ್ಮಾನಿಸಿವೆ, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ತಮ್ಮ ಪರ್ಯಾಯ ಸಂದರ್ಭದಲ್ಲಿ 'ಗಾನ ಶಾರದೆ 'ಎಂಬ ಬಿರುದು ನೀಡಿ ಸಮ್ಮಾನಿಸಿದ್ದಾರೆ. ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ 'ಸುವರ್ಣ ಕನ್ನಡಿಗ' ಎಂಬ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನಿಸಿ ಗೌರವಿಸಿದೆ. ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನದವರು ಸಂಗೀತ 'ನೃತ್ಯಶಾರದೆ' ಬಿರುದು ನೀಡಿ ಸಮ್ಮಾನಿಸಿದ್ದಾರೆ. ದೆಹಲಿ ಕನ್ನಡಿಗ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ಮೊದಲಾದ ಸಂಸ್ಥೆಗಳು ಗೌರವ ನೀಡಿದರು. ಮೂವತ್ತಕ್ಕಿಂತ ಹೆಚ್ಚು ನೃತ್ಯ ಪಟುಗಳಿಗೆ ರಂಗಪ್ರವೇಶ. ಬೆಂಗಳೂರಿನ ಜ್ಞಾನ ಮಂದಾರ ಅಕ್ಯಾಡೆಮಿಯವರ ವತಿಯಿಂದ ಸುವರ್ಣ ಕನ್ನಡಿಗ ಪ್ರಶಸ್ತಿ. ವಿಠಲ ಪ್ರತಿಷ್ಠಾನ ಸಂಗೀತ ನೃತ್ಯಶಾರದೆ ಪ್ರಶಸ್ತಿ. ಕರ್ನಾಟಕ ಬ್ಯಾರಿ ಅಕ್ಯಾಡೆಮಿ ದೆಹಲಿ ಕನ್ನಡಿಗ ಪ್ರಶಸ್ತಿ. === ಉಲ್ಲೇಖಗಳು ===